ಆರ್.ಎಸ್ ಪ್ರೊಡಕ್ಷನ್ ಲಾಂಛನದಡಿಯಲ್ಲಿ ಆರ್.ಶ್ರೀನಿವಾಸ್ ಹಾಗೂ ಕೆ.ಪಿ.ಶ್ರೀಕಾಂತ್ ನಿರ್ಮಿಸುತ್ತಿರುವ ನೂತನ ಚಿತ್ರದ ಮುಹೂರ್ತ ಸಮಾರಂಭ ಮೇ ೪ರ ಸೋಮವಾರ ಉಡುಪಿಯ ಕಾಪು ಬೀಚ್ನಲ್ಲಿ ನಡೆದಿದೆ. ಚಿತ್ರದ ಪ್ರಥಮ ಸನ್ನಿವೇಶಕ್ಕೆ ಖ್ಯಾತ ಉದ್ಯಮಿ, ಬಾಲಿವುಡ್ ನಿರ್ಮಾಪಕ ಶ್ರೀರಾಜೇಶ್ ಭಟ್ ಆರಂಭ ಫಲಕ ತೋರಿದರು. ಪರ್ಯಾಯ ಕಾಣಿಯೂರು ಮಠಾಧೀಶರಾದ ಶ್ರೀವಿದ್ಯಾವಲ್ಲಭ ತೀರ್ಥ ಶ್ರೀಪಾದರು ಕ್ಯಾಮೆರಾ ಚಾಲನೆ ಮಾಡಿದರು.
ವಿಶ್ವಾದ್ಯಂತ ಮನೆಮಾತಾಗಿರುವ ಪ್ರತಿಭಾವಂತ ನಿರ್ದೇಶಕ ರಾಜಮೌಳಿ. ಇವರು ‘ಈಗ ಚಿತ್ರದ ಮೂಲಕ ಮಾಡಿದ ಮೋಡಿಯಂತೂ ಸಾರ್ವಕಾಲಿಕ. ಈತನ ಆಲೋಚನಾ ಶೈಲಿ, ಚಿತ್ರವೊಂದಕ್ಕೆ ಎಲ್ಲವನ್ನೂ ಧಾರೆಯೆರೆದು ಕೆಲಸ ಮಾಡುವ ಗುಣಗಳೆಲ್ಲವೂ ಜನಜನಿತ. ಅಂದಹಾಗೆ ಇದೆಲ್ಲದರ ಹಿಂದೆಯೂ ನಿಜವಾದ ಶಕ್ತಿಯಂತಿರುವವರು ರಾಜಮೌಳಿಯವರ ತಂದೆ ವಿಜಯೇಂದ್ರಪ್ರಸಾದ್. ಆರ್.ಎಸ್. ಪ್ರೊಡಕ್ಷನ್ಸ್ನ ಈ ನೂತನ ಚಿತ್ರವನ್ನು ವಿಜಯೇಂದ್ರಪ್ರಸಾದ್ ಅವರು ನಿರ್ದೆಶಿಸುತ್ತಿದ್ದಾರೆ.
ವಿಜಯೇಂದ್ರ ಪ್ರಸಾದ್ ಅವರು ಮೂಲತಃ ಕನ್ನಡಿಗರೇ ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ. ಇವರ ಮಗ ರಾಜಮೌಳಿಯವರಂತೂ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ನಿರ್ದೇಶಕರು. ವಿಜಯೇಂದ್ರ ಪ್ರಸಾದ್ ಅವರೂ ಸಹ ಸಿನಿಮಾ ರೈಟಿಂಗ್ನಲ್ಲಿ ಎತ್ತಿದ ಕೈ. ಈ ವಲಯದಲ್ಲವರು ಬಲು ಪ್ರಸಿದ್ಧಿ ಪಡೆದಿದ್ದಾರೆ. ಭಾರೀ ಕನ್ನಡಾಭಿಮಾನ ಹೊಂದಿರುವ ಇವರು ಈ ಹಿಂದೆಯೂ ಕನ್ನಡ ಚಿತ್ರರಂಗದಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿದ್ದಾರೆ. ಅಪ್ಪಾಜಿ ಚಿತ್ರಕ್ಕೆ ಕಥೆ ಚಿತ್ರಕಥೆ ಬರೆದಿದ್ದು ಇದೇ ವಿಜಯೇಂದ್ರ ಪ್ರಸಾದ್ ಅವರೆ. ಇವರು ಕುರುಬನ ರಾಣಿ ಚಿತ್ರಕ್ಕೂ ಸಂಭಾಷಣೆ ಬರೆದಿದ್ದರು.
ಇದಿಷ್ಟೇ ಅಲ್ಲದೇ ತೆಲುಗು ಚಿತ್ರರಂಗದಲ್ಲಿಯೂ ಇವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ರಾಜಮೌಳಿ ನಿರ್ದೇಶನದ ಸಮರಸಿಂಹ ರೆಡ್ಡಿ, ಸಂಹಾದ್ರಿ, ಛತ್ರಪತಿ ಮತ್ತು ಈಗ ಸಿನಿಮಾಗಳಿಗೆ ಕಥೆಯ ಹೊಳಪು ನೀಡಿದ್ದು ಇವರೇ. ಇದಲ್ಲದೇ ಬೇರೆ ಬೇರೆ ರೀತಿಯಲ್ಲಿಯೂ ಈ ಚಿತ್ರಗಳಲ್ಲಿ ವಿಜಯೇಂದ್ರ ಪ್ರಸಾದ್ ಅವರು ತೊಡಗಿಕೊಂಡಿದ್ದರು.
‘ಕ್ರೇಜಿ ಸ್ಟಾರ್’ ರವಿಚಂದ್ರನ್ ನಟನೆಯ ’ಪಾಂಡುರಂಗ ವಿಠಲ’ಕ್ಕೂ ವಿಜಯೇಂದ್ರ ಪ್ರಸಾದ್ ಲೇಖನಿಯಾಡಿಸಿದ್ದರು. ತೆಲುಗು ಚಿತ್ರರಂಗದಲ್ಲಿ ವಿಜಯೇಂದ್ರ ಪ್ರಸಾದ್ ಅವರ ಸಿನಿಕೃಷಿ ಏರುಮಟ್ಟದಲ್ಲಿದೆ. ಪುತ್ರ ರಾಜಮೌಳಿ ನಿರ್ದೇಶಿಸಿರುವ ಬಹುತೇಕ ಚಿತ್ರಗಳಿಗೆ ಕಥೆ ಬರೆದಿರುವುದು ಅವರೇ. ‘ವಿಕ್ರಮಾರ್ಕಡು’, ‘ಛತ್ರಪತಿ’, ‘ಮಗಧೀರ’, ‘ಈಗ’, ‘ಬಾಹುಬಲಿ’ ಅವುಗಳಲ್ಲಿ ಪ್ರಮುಖವಾದವು. ಕಥೆ ಬರೆಯುವುದಷ್ಟೇ ಅಲ್ಲ, ನಿರ್ದೇಶನದಲ್ಲೂ ಒಂದು ಕೈ ನೋಡಿರುವ ಪ್ರಸಾದ್ ಅವರು, ನಾಗಾರ್ಜುನ ನಾಯಕತ್ವದಲ್ಲಿ ಮೂಡಿಬಂದ ‘ರಾಜನ್ನ’ ಮೊದಲಾದ ತೆಲುಗು ಚಿತ್ರಗಳಿಗೆ ಆಕ್ಷನ್-ಕಟ್ ಹೇಳಿದ್ದಾರೆ.
ರಾಘವ ಅವರು ನಾಯಕರಾಗಿ ಅಭಿನಯಿಸುತ್ತಿರುವ ಈ ಚಿತ್ರದ ನಾಯಕಿ ನೇಹ. ಶ್ರೀಲೇಖಾ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಶೇಖರ್ ಅವರ ಛಾಯಾಗ್ರಹಣವಿದೆ. ಹರ್ಷ ನೃತ್ಯ ನಿರ್ದೇಶನ ಹಾಗೂ ರವಿವರ್ಮ ಸಾಹಸ ನಿರ್ದೇಶನ ಈ ನೂತನ ಚಿತ್ರಕ್ಕಿದೆ.